ಶ್ರೀನಿಧಿಯ ಪ್ರಪಂಚದ ಮಿತ್ರವೃಂದಕ್ಕೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. ಹೊಸವರ್ಷದ ಮೊದಲ ಓದಿಗಾಗಿ ನನ್ನ ತಂದೆ ಶ್ರೀ ಟಿ. ಎಸ್. ಗೋಪಾಲ್ ಅವರ ಲೇಖನವೊಂದು ಇಲ್ಲಿದೆ.ವರಕವಿ ಬೇಂದ್ರೆಯವರು ತಮ್ಮ ಯುಗಾದಿ ಎಂಬ ಕವನದಲ್ಲಿ "ವರುಷಕೊಂದು ಹೊಸತು ಜನುಮ ವರುಷಕೊಂದು ಹೊಸತು ನೆಲೆಯು ಅಖಿಲಜೀವಜಾತಕೆ, ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ ಏತಕೆ" ಎಂದು ಹೇಳುತ್ತ, ಪ್ರಕೃತಿಯ ಇತರ ಜೀವಜಂತುಗಳ ವೈವಿಧ್ಯಮಯ ಜೀವನಕ್ಕೆ ಬೆರಗಾಗುತ್ತ ಮಾನವ ಜೀವನದ ಏಕತಾನತೆ, ನೀರಸತೆಗಳ ಬಗೆಗೆ ವಿಷಾದಿಸಿರುವುದು ಸರಿಯಷ್ಟೆ. ಇದು ನೆನಪಾದಾಗಲೆಲ್ಲ, ಆ ಕವಿವರ್ಯರು ಯುಗಾದಿಗೆ ಎರಡು ಮೂರು ತಿಂಗಳಿಗೆ ಮೊದಲೇ ನನ್ನನ್ನು ನನ್ನಂಥ ಹಲವರನ್ನೂ ಭೇಟಿ ಮಾಡಿ ನಿಜ ವಿಷಯವನ್ನು ತಿಳಿದುಕೊಳ್ಳಲಿಲ್ಲವೇಕೆಂದು ಆಶ್ಚರ್ಯವೂ ದುಃಖವೂ ಉಂಟಾಗುತ್ತದೆ. ಬೇಂದ್ರೆಯವರು ಗುರುತಿಸಿದ ಪ್ರಾಣಿಪಕ್ಷಿ ಸಸ್ಯಾದಿಗಳು ಹೊಸ ಜನ್ಮ ಹೊಸ ನೆಲೆಗಳಿಗಾಗಿ ಯುಗಾದಿಯ ದಿನವನ್ನು ಶುಭಮುಹೂರ್ತವಾಗಿ ನಿಶ್ಚಯಿಸಿಕೊಂಡಿದ್ದರೆ, ನನ್ನಂಥವರು ಇದಕ್ಕೆ ಮೂರು ತಿಂಗಳು ಮೊದಲೇ ಆರಂಭಗೊಳ್ಳುವ ಕ್ರಿಸ್ತಶಕ ಕ್ಯಾಲೆಂಡರಿನ ನವವರ್ಷದ ಜನವರಿ ಒಂದನೇ ತಾರೀಖಿನಂದೇ, ನಮ್ಮ ಕಳೆದ ವರ್ಷದ ಜನ್ಮವನ್ನ ಜಾಲಾಡಿಕೊಳ್ಳುತ್ತ ಹೊಸನೆಲೆಗಾಗಿ ತಿಣುಕಾಡುತ್ತ ಸಂಭ್ರಮ ಪಡುವುದು ಆ ಕವಿಗೆ ಕಂಡಿರಲಿಕ್ಕಿಲ್ಲ. ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ ನಮಗೆ ಬಾರದಿದ್ದರೂ, ಕಳೆದ ಇಡೀ ವರ್ಷದ ನಿದ್ರೆಯ ಜಡವನು ಕೊಡವಿ ಎಬ್ಬಿಸುವ ಹೊಸವರ್ಷದ ಆ ಮೊದಲ ದಿನ ನಮ್ಮ ಬದುಕಿಗೆ ಹೊಸ ಆಯಾಮವನ್ನೂ, ನವೀನ ಚೈತನ್ಯವನ್ನೂ ತಂದುಕೊಡಬಾರದೇ? ಆ ದಿನಕ್ಕಾಗಿ ಕಾಯುವುದೇ ನಮ್ಮ ಕಳೆದ ವರ್ಷದ ಕಾರ್ಯಕ್ರಮದ್ದೊಂದು ಪ್ರಮುಖ ಅಂಗವಾಗಿರಲಿಲ್ಲವೇ? ನವವರ್ಷದ ನಿರೀಕ್ಷೆಯಲ್ಲಿ ಹಿಂದಿನ ಡಿಸೆಂಬರ್ನ ಚಳಿಯನ್ನು ಲೆಕ್ಕಿಸದೆ ನಾವು ಸಂಭ್ರಮ ಸಡಗರಗಳಾದ ಸ್ವಾಗತದ ಸಿದ್ಧತೆ ನಡೆಸುತ್ತ ಬಂದಿಲ್ಲವೇ? ಹೊಸವರ್ಷದ ಮೊದಲ ದಿನದಿಂದ ಏನೆಲ್ಲ ಮಾಡಬಹುದು, ಏನೇನು ಮಾಡಬಾರದೆಂಬುದರ ಲೆಕ್ಕಾಚಾರದ ಹವಣಿಕೆಯಲ್ಲಿ ನವೆಂಬರ್ ಡಿಸೆಂಬರ್ಗಳಂತಹ ಅಲ್ಪವೂ ಗೌಣವೂ ಆದ ತಿಂಗಳುಗಳು ಲೆಕ್ಕಕ್ಕೇ ಬಾರದೆ ನಮ್ಮ ಆಯುಷ್ಯದ ಲೆಕ್ಕದಿಂದ ಜಾರಿ ಹೋಗಲಿಲ್ಲವೇ? ಇದನ್ನೆಲ್ಲ ಯೋಚಿಸಿಕೊಂಡರೆ ನವವರ್ಷದ ಮೊದಲ ದಿನದ ಮಹತ್ವ ಎಷ್ಟೆಂಬುದರ ಅರಿವಾಗುತ್ತದೆ.